Shivu Morigeri

Saturday, 8 June 2013

ಸೂರ್ಯ ಹುಟ್ಟೋದೂ ಸತ್ಯ ಹೂವು ಅರಳೋದೂ ಸತ್ಯ.

ಏನಾಗಿದೆಯೋ ಅವಳಿಗೆ ? ನಂಗಂತೂ ಗೊತ್ತಿಲ್ಲ...ಯಾಕೋ ಈಚೆಗೆ ಈ ಮೊದಲಿನ ಪ್ರಶಾಂತತೆ ಅವಳಲ್ಲ. ಸುಳ್ಳೇ ಹೋಯ್ದಾಡುತ್ತಾಳೆ. ಕಳೆದುಕೊಂಡ ತಾಳ್ಮೆಗೆ ನನ್ನತ್ತ ಬೆರಳು ತೋರುತ್ತಾಳೆ. ಒಂದೆಡೆ ಕೆಲಸದ ಜವಾಬ್ದಾರಿಯ ಒತ್ತಡ, ಮತ್ತೊಂದೆಡೆ ಜೀವನದ ಜಂಜಡ, ಮಗದೊಂದೆಡೆ ಓದುವ ಹಂಬಲ ನಡು ನಡುವೆ ನನ್ನೆಡೆಗಿನ ಇಣುಕು ಅವಳನ್ನು ಸುಸ್ತಾಗಿಸಿರೋ ಎಲ್ಲಾ ಗೋಚರಗಳನ್ನೂ ನಾನು ಗಮನಿಸಿದ್ದೇನೆ. ಇವೆಲ್ಲವುಗಳ ಹರಕತ್ತಿನಿಂದಾಗಿಯೇ ಅವಳೀಗ ಪ್ರಶಾಂತವಲ್ಲ ಅಷ್ಟೆ. ಅಸಲಿಗೆ ಆಕೆ ನಂಗೆ ಸಿಕ್ಕದ್ದೇ ಅಪರೂಪ. ಹೊಲದ ಒಡಲಿಗೆ ಗೊಬ್ಬರ ತುಂಬಲು ತಿಪ್ಪೆ ಕೆದಕುತಿದ್ದಾಗ ದೊರೆತ ವರ್ಜದ ಪೀಚಿನಂತೋಳು. ಅವಳ ಕೈ ಕೆಳಗಿನ ಲೇಖನಿಯಂಥಾ ಕಾರ್ಮಿಕ ನಾನು. ಅದನ್ನ ಋಣಾನುಬಂಧ ಅನ್ನಬಹುದೇನೋ. ನಮಗೇ ಗೊತ್ತಿಲ್ಲದೆ ನಮ್ಮಿಬ್ಬರ ನಡುವೆಯೊಂದು ಪರೋಕ್ಷ ಒಪ್ಪಂದ ಹುಟ್ಟಿದೆ. ಅದು ನನಗೆ ಅವಳು ಮತ್ತಾಕೆಗೆ ನಾನಾ? ಗೊತ್ತಿಲ್ಲ. ಒಟ್ಟಿನಲ್ಲಿ ಸೇರಿಗೆ ಸವ್ವಾಸೇರು. ಇಬ್ಬರ ಬದುಕಿನ ಹಾದಿ ಒಂದೇ ಆಗಿರೋದಕ್ಕೇ ನಮಗರಿವಿಲ್ಲದೇ ಬೆಳೆದ ಸ್ಪರ್ಧೆಯಲ್ಲಿ ಇನ್ನೂ ಸೋಲು ಗೆಲುವುಗಳ ಲೆಕ್ಕಾಚಾರ ನಡೆದಿಲ್ಲ. ನಾನೇ ಚೂರು ಸವಾಲು ಹಾಕುತ್ತಾ ಆರೋಗ್ಯಕರ ಸ್ಪರ್ಧೆಯಲ್ಲಿ ನಾನು ಪಕ್ವವಾಗುವ ಹಾದಿ ಕಂಡುಕೊಂಡಿದ್ದೆ. ನಿಯತ್ತಾಗಿ ಕೂಲಿ ಮಾಡಿಕೊಂಡಿದ್ದೆ ಆ ನಿಟ್ಟಿನಲ್ಲಿ. ಹೋ, ಅವಳೂ ಯಾವತ್ತೂ ಜಿದ್ದಿನಿಂದ ಹಿಂದೆ ಸರಿದ ಅಸಾಮಿಯಲ್ಲ. ನನ್ನ ಒಂದೊಂದು ತಿರುವಿಗೂ ಒಂದೊಂದು ಭತ್ತದ ಹಸಿರು ನಾಟಿಸಿ, ನೀನಾ? ನಾನಾ ? ಎಂದು ಕಣ್ಣ ಹುಬ್ಬ ಏರಿಸಿ ನಿಂತೋಳು. ಸ್ಪರ್ಧಾತ್ಮಕ ಕಣದಲ್ಲೂ ಕಲ್ಪಿತ ಬಂಧನಕ್ಕೊಳಪಟ್ಟೆನಾ ? ಉತ್ತರ ಆ ಕೊರಳ ಬಳಿ.

ತೀರಾ ಮೊನ್ನೆ ಮೊನ್ನೆಯವರೆಗೂ ಏನೆಂದರೇನೂ ಘಟಿಸದಂತಿದ್ದ ಕಂಗಳಲ್ಲಿ ದಿಢೀರ್ ಧೂಳು ಬಿದ್ದದ್ದೆಲ್ಲಿಂದ ? ರಾತ್ರಿ ಪೂರಾ ಯೋಚಿಸಿದಾಗ ದಕ್ಕಿದ್ದು, ಯಾವುದೋ ಹುಸಿ ಗುಮ್ಮನಂಥಾ ಒಣಗಿದ ಗ್ರಾಪ್ ಪತ್ರೆಯಿಂದ. ಗಾಡ್! ಇಲ್ಲ, ಅದು ಅವಳ ಜಾತ್ರೆ ಸಡಗರಕ್ಕೆ ಅಡ್ಡಗಾಲಲ್ಲಬಿಡು, ಎಂದುಕೊಂಡು ಸುಧಾರಿಸುತ್ತಲೇ, ತೀರಾ ಈಚೆಗೆ ಕಳೆದು ಹೋಗಿದ್ದ ನನ್ನ ತಂಗಿಯಂಥಾ ಸ್ನೇಹಿತೆ ಮತ್ತೆ   ನಮ್ಮದೇ ಆಫೀಸಿನ ನನ್ನ ಸಹವರ್ತಿ. ನೇಮಿಸಿದವಳೂ ಆ 
ಪುಣ್ಯಾತ್ಮಿನೇ. ನನಗದು ಹಿಗ್ಗೇ, ಬಹುಶಃ ಆಕೆಗೂ ಕೂಡಾ. ನನ್ನ ಎಲ್ಲ ಮಂಥನಗಳನ್ನು ಆ ಉಸಿರಿನೆದಿರು ಉಸುರುತ್ತಿದ್ದ ನಾನು ನಮ್ಮಿಬ್ಬರಿಗಿದ್ದ ಹಳೆಗೆ 
ಬಾಂಧವ್ಯವನ್ನು ಹಂಚಿಕೊಂಡೆನಾ ? ನೆನಪೇ ಆಗ್ತಾಯಿಲ್ಲ ಕಣೋ...

ಕೈಯಲ್ಲಿನ ಕಾಫಿ ಕಪ್ ಕೆಳಗಿಡುತ್ತಾ ಮಂಜು ಗಣೇಶನೆದಿರು ತನ್ನ ಸಂಕಟದಂಥಾ ಸಣ್ಣ ಸೆಳವನ್ನು ಹಂಚಿಕೊಂಡ.  ಇವನ ಕಥೆಯನ್ನೇ ಕೇಳುತ್ತಿದ್ದ ಗಣೇಶ, ‘ಸರಿ ಮುಂದೇನಾಯ್ತು?’ ಕೇಳಿದ. ಮಂಜು ಲೊಚಗುಟ್ಟಿ ಮತ್ತೆ ಮಾತು ಶುರುವಿಟ್ಟ:

 ಅಷ್ಟರಲ್ಲೇ ಈ ಎರಡರ ನಡುವೆ ಮತ್ತೊಂದು ಅವಗಡ. ಅಷ್ಟಾಗಿ ನಂಗೂ ಗೊತ್ತಿಲ್ಲದ ಮೂರನೇ ಪ್ರಾಜೆಕ್ಟ್ ಮ್ಯಾನೆಜರ್ ಮೇಲೆ ಅವಳ ಮತ್ತೊಂದು ಕಿಡಿ ಕಿಡಿ. ನಂಗೂ ಗೊತ್ತಾಯ್ತು ಅವಳಿಗೆ ಅನುಮಾನದ ಗೆದ್ದಲುಗಳು ಹುತ್ತ ನಿರ್ಮಿಸುತ್ತಿವೆಯೆಂದು. ಸರಿ ಹೇಳೋದು ಹೇಗೆ ? ನನ್ನೊಡನೆ ಅಷ್ಟೊಂದು ಸಲುಗೆಯಿಂದ ಇರೋ ಅದೇ ಹುಡುಗಿ, ಯಾವತ್ತಾದರೂ ‘ಬಾ ಕೂತು ಚರ್ಚಿಸೋಣ’ ಎಂದಿದ್ದರೆ? ಕಥೆಯೇ ಬೇರೆಯಿತ್ತು. ಪುರುಸೊತ್ತೆಲ್ಲಿದೆ ಅವಳಿಗೆ ? ದಾರಿಯೆಲ್ಲಿದೆ ವಿವರಣೆಗೆ ? ಅಷ್ಟಕ್ಕೇ ಅವಳು ಆಯ್ದುಕೊಂಡದ್ದು ಗಾಢ ಮೌನ.

ಇನ್ನೂ ನಾ ಸುಮ್ಮನಿದ್ದರೆ ಅವಳು ನಂಬಿಕೊಂಡ ಸುಳ್ಳೇ ಸತ್ಯದ ಮುಖವಾಡ ತೊಟ್ಟೀತೆಂದೇ ಎಲ್ಲದಕ್ಕೂ ಪುರಾವೆ ಸಹಿತ ಉತ್ತರಿಸುವ ಭರವಸೆ ನೀಡಿದರೂ ಆಕೆಯ ವರಸೆ ? ಅದ್ಯಾಕೆ ಚಕ್ಕನೆ ಮಗ್ಗುಲು ಬದಲಿಸುತ್ತಿತ್ತು ? ರಜೆಯಲ್ಲೋ ಅಥವಾ ಅವಳೇ ತನ್ನ ಛೇಂಬರ್ ಗೆ ನನ್ನ ಕರೆದಾಗಲೋ ವಿವರಿಸಿದರಾಯ್ತು ಎಂದುಕೊಂಡಿದ್ದೆ. ಆದರೆ ತೀರಾ ಮೊನ್ನೆ ಮೀಟಿಂಗೊಂದರಲ್ಲಿ ಪರೋಕ್ಷವಾಗಿ ಅವಳಾಡಿದ ಮಾತುಗಳಿವೆಯಲ್ಲಾ ಅವು ಅವಳಿಗೂ ಸಖ್ಯವಲ್ಲ. ‘ನಿಂಗೆ ಬಿಡುವಿನ ಸಮಯ ಅಂತ ಸಿಕ್ಕಾಗ ಒಬ್ಬಳೇ ಕೂರು. ಧ್ಯಾನದ ಕೊಳಕ್ಕಿಳಿಯಬೇಡ. ಸುಮ್ಮನೆ  ನಡೆದ ಹಾದಿಯನ್ನೊಮ್ಮೆ ನೆನಪಿಸಿಕೋ. ಅಷ್ಟೊಂದು ಪುರುಸೊತ್ತಿಲ್ಲವಾ ? ಸರಿ, ಹೋಗಲಿ ಇತ್ತೀಚಿನ ನನ್ನ ಭಾಷಾ ಸಾಮರ್ಥ್ಯ ಯಾಕೆ ಕುಸಿಯುತ್ತಿದೆ ಎಂತಲಾದರೂ ನೆನದುಕೋ. ನಾನ್ಯಾಕೆ ನಿನ್ನ ಕಣ್ಣಂಚನ್ನು ವಂಚಿಸಿ ಸೀಮೆ ದಾಟಲಿ ? ಏನೊಂದನ್ನೂ ಯೋಚಿಸದೆ ನನಗೆ ನರಕದೂತ ಪಟ್ಟಗಟ್ಟಿದೆನೆಂದು ನಿನಗನಿಸಲಿಲ್ಲವೇ ? ಅತಿಯಾದ ಶಂಕೆಯಿಂದಲೇ ನಿನ್ನ ಮುಷ್ಟಿಯಲ್ಲಿರುವ ಅರಿಷಿಣದ ದಾರವೂ ಕುಣಿಕೆಯ ಭವಿಷ್ಯ ಸಾರುತ್ತೆ. ಎಂಥಾ ವಿಪರ್ಯಾಸಕ್ಕೋಗಿದ್ದೀಯಾ ನೀನು.


ಒಂದು ನಿಜ ಹೇಳಲಾ ? ನಿನ್ನಿಂದ ನಾ ಕಲಿತ ಬಾಣಗಳು ನನಗಷ್ಟೇ ಗೊತ್ತು. ಸದಾ ಸಿಡುಕು ಕೋಪದ ಕುಂಡದೆದೆಯಲ್ಲಿ ಸಹನೆಯ ಹಸಿರುಕ್ಕಿಸಿದೋಳು ನೀನು. ತಪ್ಪು ಇಬ್ಬರಲ್ಲೂ ಇಲ್ಲ ಆದರೆ ನನ್ನಲ್ಲಿ ತಪ್ಪನ್ನು ಕಂಡ ನಿನ್ನ ಕಂಗಳಿಗಲ್ಲಿ ನಾನು ಯಾವ ಕ್ಷಣವೂ ನೀರುರಿಸೊಲ್ಲ. ನೀನು ಕಲ್ಲಾದರೇನಂತೆ ? ನಾನು ಖಾರವಾಗಲಾರೆ. ಎಷ್ಟೇ ಆಗಲಿ ನಿನಗಿಂತ ಚಿಕ್ಕೋನು ನಾನು ಎಲ್ಲದರಲ್ಲಿಯೂ. ಏನೋ ನನಗೆ ತಿಳಿದ ಒಂದು ಮಾತು ಹೇಳುತ್ತೇನೆ. ತಾಳ್ಮೆ ತಂದುಕೋ, ನಿನ್ನ ಕಂಗಳೊಳಗಿನ ನಕ್ಷತ್ರ ಮಿಂಚಿಗೆ ನೀನೇ ಒಡತಿ ನೀನೇ ಸಾರಥಿ. ಇಲ್ಲಸಲ್ಲದ್ದನ್ನು  ನೀನೇ ಕಲ್ಪಸಿಕೊಂಡು ಚೂರುಗನ್ನಡಿಮೇಲೆ ನೆತ್ತರು ಸುರಿಸದಿರು. ನಿನ್ನ ಅಪ್ಪಣೆಯಿಲ್ಲದೆ ಅರಳಿದ ಹೂವು ಅದ್ಯಾಕೆ ನಿನ್ನ ಮುಡಿಯೇರುತ್ತೆ? ನಿಂಗೆ ಪ್ರೀತಿಯಿಂದ ಪೆದ್ದು ಅನ್ನಬೇಕು ಅನ್ನಿಸುತ್ತೆ. ಅಂಥಾದ್ದೇನೂ ಆಗೊಲ್ಲ, ಹೋಗು. ಹೋಗಿ ನಿನ್ನ ಮತ್ತದೇ ಗೆಲುವಿನ ಕಣದಲ್ಲಿ ನಿಲ್ಲು ಸೂರ್ಯ ಹುಟ್ಟೋದೂ ಸತ್ಯ ಹೂವು ಅರಳೋದೂ ಸತ್ಯ. ಸುಮ್ಮನೆ ಯಾಕೆ ದೃತಿಗೆಡುತ್ತೀ. ಸ್ವಲ್ಪ ನಿರುಮ್ಮಳಾಗು’ 

ಹೀಗೇಂತ ಹೇಳಿಬಿಡೋಣ ಅನ್ನಿಸಿಬಿಡುತ್ತೆ. ಯಾಕೋ ದುಗುಡ. ಎಂದು ತೊದಲುತ್ತಾ ಗೆಳೆಯನತ್ತ ನೋಡಿದ ಮಂಜು. ಗೆಳೆಯರಿಬ್ಬರೂ ಕುಳಿತದ್ದು ಮೊದಲೇ ಅವರದೇ ಆಫೀಸಿನ ಕ್ಯಾಂಟೀನು. ಅಲ್ಲಿಗೆ ಫರ್ವಿನ್ನಳೂ ಬರೋದು ಸಹಜ. ಅಂತೆಯೇ ಆಗಲೇ ಆಕೆ ಬಂದು ಇಷ್ಟೊತ್ತೂ ನಡೆದ ಮಾತುಕತೆಯನ್ನು ಇವರ ಟೇಬಲ್ಲಿನ ಹಿಂದಿನ ಛೇರಿನಲ್ಲಿ ಕುಳಿತು ಕೇಳಿಸಿಕೊಂಡಿದ್ದಳು. ಏನಾಯಿತೋ ಅವಳಿಗೆ ಕಂಗಳನ್ನು ತುಂಬಿಕೊಂಡು ತನ್ನ ಛೇಂಬರ್ ನತ್ತ ದೌಡಾಯಿಸಿದಳು. ಫರ್ವಿನ್ ಬಂದು ಹೋದದ್ದನ್ನು ಗಮನಿಸಿಯೇ ಇರದ ಗಣೇಶ ಟೈಂ ನೋಡಿಕೊಂಡ. ಲಂಚ್ ಹವರ್ ಮುಗಿದಿತ್ತು. ತಲೆ ತಗ್ಗಿಸಿ ಕುಳಿತಿದ್ದ ಮಂಜುವಿನ ಮುಂಗೈಗೆ ತಟ್ಟಿ ‘ ಎದ್ದು ಬಾ ಟೈಂ ಆಯ್ತು. ಎಲ್ಲದಕ್ಕೂ ಪರಿಹಾರ ಇರುತ್ತೆ. ರಾತ್ರಿ ಯೋಚನೆ ಮಾಡೋಣ ಎಂದು ತಮ್ಮ ಸೆಕ್ಷನ್ ನತ್ತ ತೆರಳಿದರು. 

ಮಂಜು ತನ್ನ ಟೇಬಲ್ ಗೆ ಕುಳಿತು ಆಗಷ್ಟೇ ತನ್ನ ಕಂಪ್ಯೂಟರ್ ಆನ್ ಮಾಡಿದ. ಅಷ್ಟರಲ್ಲಾಗಲೇ ಆಫೀಸಿನ ಪ್ಯೂನ್ ಮಂಜುವಿನ ಟೇಬಲ್ ಬಳಿ ಬಂದು ‘ಸಾರ್ ನಿಮನ್ನ ಫರ್ವೀನ್ ಮೇಡಂ ಕರೀತಿದಾರೆ’ ಅಂದ ಮಂಜು ಎದ್ದು ಛೇಂಬರ್ ನ ಒಳ ಹೋದ. 

No comments:

Post a Comment